ಮೈಸೂರಿನ ಕೋವಿಡ್ ಮಿತ್ರದ ಬಗ್ಗೆ ಕೇಂದ್ರಕ್ಕೆ ಮಾಹಿತಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
1 min read![](https://nannurumysuru.com/wp-content/uploads/2021/05/DC-Rohini-Sindhuri.jpg)
ಮೈಸೂರು: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಕೋವಿಡ್-19 ಪ್ರಕರಣ ದಾಖಲಾಗುತ್ತಿರುವ ಜಿಲ್ಲೆಗಳೊಂದಿಗೆ ಚರ್ಚಿಸಿದ್ದು, ಸೋಂಕಿನ ಪ್ರಮಾಣ ಕಡಿಮೆ ಮಾಡಲು ಹಮ್ಮಿಕೊಂಡಿರುವ ವಿನೂತನ ಪ್ರಯತ್ನಗಳ ಬಗ್ಗೆ ಕೇಳಿದರು. ನಮ್ಮ ಜಿಲ್ಲೆಯಲ್ಲಿ ಆರಂಭಿಸಿರುವ ‘ಕೋವಿಡ್ ಮಿತ್ರ’ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದರು.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರಿಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
![](https://nannurumysuru.com/wp-content/uploads/2023/09/Nayana-Kumars.jpg)
ನಮ್ಮ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಶೇ.50 ರಷ್ಟು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಚಿಕಿತ್ಸೆಗೆ ನೆರವಾಗಲು 150 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋವಿಡ್ ಮಿತ್ರಗಳನ್ನಾಗಿ ಪರಿವರ್ತಿಸಲಾಗಿದೆ. ಈ ಪರಿಕಲ್ಪನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
![](https://nannurumysuru.com/wp-content/uploads/2021/05/WhatsApp-Image-2021-05-18-at-4.12.06-PM-1024x768.jpeg)
ಕೋವಿಡ್-19 ಸೋಂಕು ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿಗಳು ಕಾಳಜಿ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಇತ್ತೀಚಿಗೆ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ ಗ್ರಾಮೀಣ ಭಾಗದ ಜನರ ಸುರಕ್ಷತೆಗೆ ಕ್ರಮವಹಿಸಲಾಗುತ್ತಿದೆ ಎಂದರು.
ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಮೊದಲನೇ ದಿನದಿಂದ ಚಿಕಿತ್ಸೆ ಪ್ರಾರಂಭಿಸಿದರೆ ಶೇ.85 ರಷ್ಟು ಹೋಂ ಐಶೊಲೇಷನ್ನಲ್ಲಿ ಗುಣಮುಖರಾಗಬಹುದು. ಎಲ್ಲಾ ತಾಲ್ಲೂಕುಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕೋವಿಡ್ ಮಿತ್ರಾಗೆ ಬಂದು ಔಷಧಿ ಪಡೆದಿದ್ದಾರೆ. ಕೋವಿಡ್ ಮಿತ್ರ ಇಲ್ಲದಿದ್ದರೆ ಅವರೆಲ್ಲರೂ ಆರೋಗ್ಯ ಗಂಭೀರವಾದಾಗ ಆಸ್ಪತ್ರೆ ದಾಖಲಾಗುತ್ತಿದ್ದರು ಎಂದು ಹೇಳಿದರು.
ಕೋವಿಡ್ ಮಿತ್ರ ಜನರಿಗೆ ಉಪಯೋಗಕ್ಕೆ ಬರಲಿದ್ದು, ಆಶಾ ಕಾರ್ಯಕರ್ತೆಯರು, ಗ್ರಾಮೀಣ ಭಾಗದ ಟಸ್ಕ್ಫೋರ್ಸ್ ಮೂಲಕ ಮನೆಮನೆಗೆ ತಲುಪುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುವ ಭರವಸೆ ಇದೆ ಎಂದರು.
ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲು ಚಿಂತಿಸಲಾಗಿದೆ. ಕೋವಿಡ್ ಮುಕ್ತ ಗ್ರಾಮವನ್ನಾಗಿ ಮಾಡಿದ ಗ್ರಾಮ ಪಂಚಾಯತಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಪ್ರೋತ್ಸಾಹ ಧನವನ್ನು ಕೂಡ ನೀಡುವ ಆಲೋಚನೆ ಇದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ನಂಜನಗೂಡು ಹಾಗೂ ಮೈಸೂರು ತಾಲ್ಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ತಾಲ್ಲೂಕಿನಿಂದ ಮೈಸೂರು ನಗರಕ್ಕೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡುವವರ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.
![](https://nannurumysuru.com/wp-content/uploads/2021/05/WhatsApp-Image-2021-05-18-at-4.12.08-PM-1024x682.jpeg)
ಮೈಸೂರು ನಗರದಲ್ಲಿ ಸಿಎಸ್ಆರ್ ಫಂಡ್ ಮೂಲಕ ಸಾಕಷ್ಟು ಔಷಧಿ, ಆಕ್ಸಿಜನ್ ಕಾನ್ಸನ್ಟ್ರೇಟರ್ ದೊರಕಿದೆ. ಇದನ್ನು ತಾಲ್ಲೂಕು ಆಸ್ಪತ್ರೆಗಳಿಗೆ ಹಂಚಲಾಗುತ್ತಿದೆ. ಆಕ್ಸಿಜನ್ ಕೊರತೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರವು ಪೂರೈಸುವ ಭರವಸೆ ನೀಡಿದೆ ಎಂದು ತಿಳಿಸಿದರು.
ಸೋಂಕಿನ ಲಕ್ಷಣಗಳು ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸುತ್ತಿರುವ ಹಿನ್ನೆಲೆ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕನ್ನು ತಡೆಗಟ್ಟಲು ಅಧಿಕಾರಿ ವರ್ಗದಿಂದಲ್ಲದೆ, ಜನರ ಸಹಭಾಗಿತ್ವವು ಕೂಡ ಅವಶ್ಯಕವಾಗಿದೆ ಎಂದರು.
ನಗರದಲ್ಲಿ ಸೋಂಕು ನಿಯಂತ್ರಿಸಲು ಟಾಸ್ಕ್ಫೋರ್ಸ್ ರಚಿಸಿದ್ದು, ಟೆಲಿಮೆಡಿಷನ್ ಕೂಡ ಆರಂಭಿಸಲಾಗಿದೆ. ರೋಟರಿ ಕ್ಲಬ್ ವತಿಯಿಂದ 80 ಮಂದಿ ವೈದ್ಯರಿದ್ದು, ಯುಕೆಯಲ್ಲಿರುವ ಮೈಸೂರು ಮೂಲದ 40 ವೈದ್ಯರು ಟೆಲಿಮೆಡಿಷನ್ ನಡೆಸಲಿದ್ದಾರೆ. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಟೆಲಿಮೆಡಿಷನ್ ಮೂಲಕ ಸಲಹೆ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಸಿಇಒ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.