ಮೈಸೂರಿನಲ್ಲಿ ಸೆ.8ಕ್ಕೆ ದಸರಾ ಕಾರ್ಯಕಾರಿ ಸಮಿತಿ ಸಭೆ!

1 min read

ಮೈಸೂರು : ದಸರಾ ಆಚರಿಸುವ ಸಂಬಂಧ ಮೈಸೂರಿನಲ್ಲೇ ಸೆಪ್ಟೆಂಬರ್ 8ರಂದು ಶುಕ್ರವಾರ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಿದ್ದೆವೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು. ‌ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಕೊರೊನಾ 3ನೇ ಅಲೆ ಎದುರಾಗಬಹುದು ಎಂಬ ನಿರೀಕ್ಷೆಯಲ್ಲಿ ಈ ಬಾರಿಯೂ ಮೈಸೂರು ದಸರಾವನ್ನು ಸರಳವಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಮೈಸೂರು ದಸರಾಗೆ 5 ಕೊಟಿ ರೂ. ಅನುದಾನ ಕೇಳಲಾಗಿತ್ತು. ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ದಸರಾಗೂ ಸೇರಿಸಿ, ಮುಖ್ಯಮಂತ್ರಿಗಳು 6 ಕೋಟಿಯನ್ನು ನೀಡಿದ್ದಾರೆ ಎಂದು ಹೇಳಿದರು.

ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಪ್ರತಿಮೆಗೆ ಪುಷ್ಪಾರ್ಚನೆ

ಈ ಬಾರಿಯ ದಸರಾ ಉದ್ಘಾಟಕರ ವಿಷಯದಲ್ಲಿ ಮುಖ್ಯಮಂತ್ರಿಗಳೇ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ನಾವು ಯಾವುದೇ ಉದ್ಘಾಟಕರ ಹೆಸರನ್ನು ಸೂಚಿಸಿಲ್ಲ. ಹೀಗಾಗಿ ದಸರಾ ಉದ್ಘಾಟಕರು ಯಾರೆಂದು ಮುಖ್ಯಮಂತ್ರಿಗಳೆ ತಿಳಿಸಲಿದ್ದಾರೆ ಎಂದು ಹೇಳಿದರು.

ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿಯನ್ನು ತಜ್ಞರು ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಷ್ಟು ಜನರಿಗೆ ಪ್ರವೇಶ ನೀಡಬೇಕು ಎಂಬುದನ್ನು ಸದ್ಯದಲ್ಲೆ ತಿಳಿಸಲಾಗುವುದು ಎಂದರು.

ದಸರಾ ಉದ್ಘಾಟನೆಯು ಎಂದಿನಂತೆ ಚಾಮುಂಡಿ ಬೆಟ್ಟದಲ್ಲಿ ಆಗುವುದು. ಆದರೆ ಜಂಬೂಸವಾರಿ ಅರಮನೆಯ ಆವರಣಕ್ಕೆ ಸೀಮಿತವಾಗಿರುತ್ತದೆ. 9 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆಯ ಆವರಣದಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಜಿ. ಹೇಮಂತ್ ಕುಮಾರ್, ಡಾ. ಸಿ.ಪಿ. ರಾಮಶೇಷ್, ಪ್ರೊ ಸುರೇಶ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯತಿ ಸಿ.ಇ.ಒ. ಎ.ಎಂ.ಯೋಗೀಶ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *