ಶ್ರೀಕಂಠೇಶ್ವರ ದೇವಾಲಯದ ಭದ್ರಕಾಳಿ ಮೂರ್ತಿ ದಿಢೀರ್ ಸ್ಥಳಾಂತರ

1 min read

ಮೈಸೂರು,ಸೆ.17- ನಂಜನಗೂಡು ನಂಜುಂಡೇಶ್ವರನ ದೇವಾಲಯದ ಒಳ ಆವರಣದಲ್ಲಿ ಬಲಭಾಗದಲ್ಲಿ ಇರುವ ಶಿವನ ಅವತಾರ ಮೂರ್ತಿಗಳಲ್ಲಿ ಒಂದಾದ ವೀರಭದ್ರೇಶ್ವರ ಮೂರ್ತಿಯ ಜೊತೆಯಲ್ಲಿ ಇದ್ದ ಭದ್ರಕಾಳಿ ಮೂರ್ತಿಯನ್ನು ದಿಢೀರ್ ಎಂದು ಸ್ಥಳಾಂತರ ಮಾಡಲಾಗಿದೆ.
ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ, ಯಾವುದೇ ಮುನ್ಸೂಚನೆ ನೀಡದೆ ವಿಗ್ರಹ ಸ್ಥಳಾಂತರ ಮಾಡಲಾಗಿದೆ. ಭದ್ರಕಾಳಿ ವಿಗ್ರಹಕ್ಕೆ ಪ್ರತಿದಿನ ಪ್ರತಿದಿನ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿತ್ತು. ಆದರೆ ಇದೀಗ ಧಿಢೀರ್ ಸ್ಥಳಾಂತರ ಮಾಡಿದ ಉದ್ದೇಶ ಏನು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಸ್ಥಳಾಂತರಗೊಂಡ ಸ್ಥಳದ ಬಳಿ ಹೋಮ ನಡೆಸಿರುವ ಕುರುಹು ಇದೆ. ವಿಗ್ರಹಗಳಿಗೆ ಪೂಜೆ ಮಾಡುವ ಕಾರ್ಯ ಹೊರತು ಪಡಿಸಿದ್ರೆ ಸ್ಥಳಾಂತರ ಮಾಡಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನ ಅನುಸರಿಸಬೇಕಿದೆ. ಆದ್ರೆ ಸಿಬ್ಬಂದಿಗಳು ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಇನ್ನು ವಿಗ್ರಹ ಭಿನ್ನವಾಗಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ದೇವಾಲಯದಲ್ಲಿ ವಿಗ್ರಹಗಳ ಸರಿಯಾದ ನಿರ್ವಹಣೆ ಆಗುತ್ತಿಲ್ಲ. ಅಜಾಗರೂಕತೆಯಿಂದ ಮೂರ್ತಿಯು ಮುರಿದು ಬಿದ್ದಿರಬಹುದೆಂದು ಶಂಕೆ. ವಿಗ್ರಹ ಸ್ಥಳಾಂತರ ಭಕ್ತರಿಗೆ, ಸಾರ್ವಜನಿಕರಿಗೆ ತಿಳಿಯಬಾರದೆಂದು ಗೌಪ್ಯತೆ ಕಾಪಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರದೆ ಸ್ಥಳಾಂತರ ಮಾಡಿರೊದಕ್ಕೆ ಸಾರ್ವಜನಿಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವಾಲಯಗಳ ನಿರ್ಮಾಣ ಕಾಲದಲ್ಲೇ ಆಲಯದ ಎಡಭಾಗದಲ್ಲಿ 64 ನಯನಾರ್ ವಿಗ್ರಹಗಳು ಬಲಭಾಗದಲ್ಲಿ 18 ಶಿವನ ಅವತಾರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ನೂರಾರು ವರ್ಷಗಳ ಹಿಂದೆ ಪ್ರತಿಷ್ಟಾಪನೆಗೊಂಡ ವಿಗ್ರಹಕ್ಕೆ ಹಾಕಿದ್ದ ಅಷ್ಟಬಂಧನ ಶಕ್ತಿ ಕಳೆದುಕೊಂಡು ಮೂರ್ತಿಗಳು ಅಲುಗಾಡುವ ಸ್ಥಿತಿ ತಲುಪಿವೆ. ಅದರ ದುರಸ್ತಿ ಕಾರ್ಯಮಾಡಿಲ್ಲ. ಈ ಕುರಿತು ಈ ಹಿಂದೆಯೇ ಅಷ್ಟ ಮಂಗಲ ಪ್ರಶ್ನೆ ಹಾಕಿದ್ದ ಸಂದರ್ಭದಲ್ಲಿ ಅಷ್ಟಬಂಧನ ಹಾಕಿ ಕಲಾಪೂರ್ಣ ಮಾಡಬೇಕೆಂದು ಪ್ರಸ್ತವಾನೆ ಸಲ್ಲಿಸಲಾಗಿತ್ತು. ಆದರೆ ಈ ವಿಚಾರದಲ್ಲಿ ಪುರಾತತ್ವ ಇಲಾಖೆಯ ಅಧಿಕಾರಿಗಳು ಆಸಕ್ತಿ ತೋರಲಿಲ್ಲ.
ದೇವಾಲಯಕ್ಕೆ ಹುಂಡಿ ಸಂಗ್ರಹದಲ್ಲಿ ತಿಂಗಳಿಗೆ 1 ಕೋಟಿಗೂ ಅಧಿಕ ಆದಾಯವಿದೆ. ಅಲ್ಲದೇ ವಾಹನ ನಿಲುಗಡೆ ಟೆಂಡರ್, ಚಪ್ಪಲಿ ಟೆಂಡರ್ ,ಶೌಚಾಲಯದ ಟೆಂಡರ್ ,ಲಾಡು ,ಕಲ್ಲು ಸಕ್ಕರೆ, ವಿಶೇಷ ದರ್ಶನದ ಟಿಕೇಟ್ ಹೀಗೆ ತಿಂಗಳಿಗೆ ಕೋಟಿ ಕೋಟಿ ಆದಾಯ ಇದೆ. 100 ಕೋಟಿಗೂ ಹೆಚ್ಚು ಹಣ ದೇವಾಲಯ ಖಾತೆಯಲ್ಲಿದೆ. ಇಷ್ಟೇಲ್ಲ ಆದಾಯದಲ್ಲಿ ಸಮೃದ್ಧವಾಗಿದ್ದರು ಮೂರ್ತಿಗಳ ಸಂರಕ್ಷಣೆಗೆ ಹಣ ವ್ಯಯ ಮಾಡಲು ಆಸಕ್ತಿ ತೋರದಿರುವುದು ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ.

About Author

Leave a Reply

Your email address will not be published. Required fields are marked *