September 8, 2024

KRS ಡ್ಯಾಂ ಬಿರುಕು ಬಿಟ್ಟಿದೆ ಎಂದು ನಾನು ಹೇಳಿಯೇ ಇಲ್ಲ- ಸುಮಲತಾ U ಟರ್ನ್!

1 min read

KRS ಡ್ಯಾಂ ಬಿರುಕು ಬಿಟ್ಟಿದೆ ಎಂದು ನಾನು ಹೇಳಿಯೇ ಇಲ್ಲ- ಸುಮಲತಾ U ಟರ್ನ್!

ನಾನು ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತ ಹೇಳಿಲ್ಲ. ಬಿರುಕು ಬಿಟ್ಟಿದಿಯಾ ಅಂತ ಸಭೆಯಲ್ಲಿ ಕೇಳಿದ್ದೇನೆ ಎಂದು ಡ್ಯಾಂ ವಿಚಾರದಲ್ಲಿ ಸುಮಲತಾ ಪಲಾಯನ ಮಾಡಿದ್ದಾರೆ. ಬಿರುಕು ಬಿಟ್ಟಿದೆ ಅಂತ ನಾನು ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿಲ್ಲ. ‌ಬಿರುಕಿನ ಬಗ್ಗೆ ನನಗೆ ಆತಂಕ ಇದ್ದು ನನಗೆ ಈಗಲೂ ಶೇ. 500ರಷ್ಟು ಆತಂಕ ಇದೆ. ಗಣಿಗಾರಿಕೆಯಿಂದ ಕೆಆರ್‌ಎಸ್ ಬಿರುಕಾಗುತ್ತೆ ಎಂಬ ಆತಂಕ ಇದೆ.


ನಾನು ಇದನ್ನೇ ದಿಶಾ ಸಭೆಯಲ್ಲಿ ಕೇಳಿರೋದು. ಆದರೆ ಅದನ್ನೇ ಹೊರಗೆ ಬೇರೆ ರೀತಿಯಲ್ಲಿ ಅರ್ಥೈಸಿ ಇಷ್ಟೆಲ್ಲ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಗಣಿ ಅಧಿಕಾರಿಗಳು ಕೂಡ ಏನೂ ಆಗಿಲ್ಲ ಎನ್ನುವಂತೆ ಮಾತನಾಡುತ್ತಾರೆ. ಅವರ ಮೇಲೆಯೂ ಒತ್ತಡಗಳು ಇರಬಹುದು. ಹೀಗಾಗಿ ಸ್ವತಂತ್ರವಾಗಿ ತನಿಖೆಯಾಗಬೇಕು. ರಾಜ್ಯದ ಅಧಿಕಾರಿಗಳಿಂದ ಸಾಧ್ಯವಾಗದಿದ್ದರೆ ಸಿಬಿಐ ತನಿಖೆ ಮಾಡಿಸಲಿ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1200 ಕೋಟಿ ರೂ. ನಷ್ಟ ಆಗಿದೆ. ಇಷ್ಟು ರಾಜ ಧನ ವಸೂಲಿ ಮಾಡಿದ್ರೆ ಮಂಡ್ಯ ಅಭಿವೃದ್ಧಿಗೆ ಬಳಸಬಹುದಿತ್ತು. ಈಗ ಗಣಿಗಾರಿಕೆ ಇಲಾಖೆಯಲ್ಲಿ ಡ್ರೋಣ್ ಸರ್ವೆಗೆ 4-5 ಲಕ್ಷ ರೂ. ಕೂಡ ಹಣ ಇಲ್ಲ ಎನ್ನುತ್ತಿದ್ದಾರೆ. ನಾನು ಗಣಿ ಸಚಿವ ಮುರುಗೇಶ್ ನಿರಾಣಿಗೆ ಎಲ್ಲವನ್ನು ಹೇಳಿದ್ದೇನೆ. ಮೊದಲು ಅವರನ್ನು ಭೇಟಿ ಮಾಡಿ ಬೆಟ್ಟದ ಸುತ್ತಮುತ್ತಲಿನ ಗಣಿಗಾರಿಕೆ ಪ್ರದೇಶಕ್ಕೆ ಕರೆದುಕೊಂಡು ಬರುವೆ. ನಂತರ ವಸ್ತು ಸ್ಥಿಗತಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸುವೆ ಎಂದು ಮೈಸೂರಿನಲ್ಲಿ ಸಂಸದೆ ಸುಮಲತಾ ಹೇಳಿಕೆ ನೀಡಿದ್ದಾರೆ. ಇನ್ನು ಮುಂದುವರೆದ ಮಾತನಾಡಿದ ಅವರು, ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

ನಾನು ಅದನ್ನ ಎಕ್ಸ್‌ಪೋಸ್ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ.‌‌ ಕೆಆರ್‌ಎಸ್ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ‌ಈ ಪ್ರದೇಶದಲ್ಲಿ ಅಕ್ರಮ, ಸಕ್ರಮ ಅನ್ನುವ ಪ್ರಶ್ನೆಯೇ ಬರೋದಿಲ್ಲ. ಗಣಿಗಾರಿಕೆಯಿಂದಾಗಿ ಕೆಆರ್‌ಎಸ್ ಡ್ಯಾಂನಲ್ಲಿ ಕಂಪನ ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳೂ ಇವೆ. ಆದ್ದರಿಂದ ಗಣಿಗಾರಿಕೆ ನಿಲ್ಲಬೇಕು ಅಂತ ಹೋರಾಟ ಮಾಡುತ್ತಿದ್ದೇನೆ. ಸರ್ಕಾರವನ್ನಾಗಲೀ, ಮತ್ಯಾರನ್ನೋ ಆಗಲಿ ಚಾರ್ಜ್ ಮಾಡೋದು ನನ್ನ ಉದ್ದೇಶ ಅಲ್ಲ. ವಿರೋಧ ಪಕ್ಷದವರನ್ನೂ ಎಳೆತಂದು ಇದಕ್ಕೆ ರಾಜಕೀಯ ರೂಪ ಕೊಡೋದಕ್ಕೂ ನಾನು ಬಯಸಲ್ಲ. ಆದರೆ ಅಕ್ರಮದ ಬಗ್ಗೆ ಹೋರಾಡುವ ಮನಸ್ಥಿತಿ ಇರುವ ಎಲ್ಲರ ಸಹಕಾರ ಕೇಳುತ್ತೇನೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವವರೆಗೂ ಹೋರಾಟ ಮಾಡುತ್ತೇನೆ. ಇನ್ನು, 50 ವರ್ಷ ಬಿಟ್ಟು ಕೆಆರ್‌ಎಸ್ ಹೊಡೆದು ಹೋದ್ರೆ ಪರವಾಗಿಲ್ವಾ? ಮತ್ತೊಮ್ಮೆ ಕೆಆರ್‌ಎಸ್ ಹೊಡೆಯುವ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ. ಕೆಆರ್‌ಎಸ್ ಸುತ್ತಮುತ್ತ ಆತಂಕದ ವಾತಾವರಣ ಇರುವ ಬಗ್ಗೆ ಎಲ್ಲೆಡೆ ವರದಿ ಆಗುತ್ತಿದೆ. ಈಗ ಏನೂ ಆಗಿಲ್ಲ ಅಂದ್ರೆ ಸರಿ. ಹಾಗಂತ ಇನ್ನು 10 ವರ್ಷ ಬಿಟ್ಟು ಕೆಆರ್‌ಎಸ್ ಡ್ಯಾಂ ಹೊಡೆದರೆ ನಿಮಗೆ ಪರವಾಗಿಲ್ವ. 50 ವರ್ಷ ಬಿಟ್ಟು ಹೊಡೆದರೆ ಓಕೆನಾ?
ಕರೊನಾ ಬರುವ ಮುಂದೆ ಮಾಸ್ಕ್ ಹಾಕ್ಕೊಳ್ಳಿ, ಸ್ಯಾನಿಟೈಸ್ ಮಾಡ್ಕೊಳ್ಳಿ ಅಂತ ಹೇಳ್ತೀವಿ. ಅಂದ್ರೆ ನಮಗೆ ಕರೊನಾ ಬಂದಿದೆ ಅಂತ ಅರ್ಥನಾ ? ಎಂದು ಮಾಧ್ಯಮಗಳ ಮುಂದೆ ಪ್ರಶ್ನೆಯಿಟ್ಟಿದ್ದಾರೆ ಸಂಸದೆ ಸುಮಲತಾ.

About Author

Leave a Reply

Your email address will not be published. Required fields are marked *