ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ: ಹೈಕೋರ್ಟ್ ಆಕ್ರೋಶ

1 min read

ಬೆಂಗಳೂರು,ಜ.12-ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಮೂರನೇ ಅಲೆಯ ಭೀತಿ ಹೆಚ್ಚಾಗಿದೆ.
ಈ ನಡುವೆ ಕಾಂಗ್ರೆಸ್ ಮೇಕೆದಾಟು ಯೋಜನೆ ಶೀಘ್ರವೇ ಜಾರಿಗೊಳಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆಯ ಕುರಿತು ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.


ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಕೋವಿಡ್ ಹೆಚ್ಚುತ್ತಿರುವ ವೇಳೆ ಪಾದಯಾತ್ರೆ ನಡೆಸಲು ಅನುಮತಿ ನೀಡಿದ್ದು ಯಾರು? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಇದೇ ವೇಳೆ ಕೆಪಿಸಿಸಿಗೆ ಪ್ರಶ್ನಿಸಿರುವ ಪೀಠ, ರ್‍ಯಾಲಿಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ? ಎಂದು ಚಾಟಿ ಬೀಸಿರುವ ಕೋರ್ಟ್ ಈ ಕುರಿತು ಉತ್ತರಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಾಕೀತು ಮಾಡಿದೆ.
ಈ ವೇಳೆ ಸರ್ಕಾರ ಹಾಗೂ ಕೆಪಿಸಿಸಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು,ಒಂದು ದಿನ ದಲ್ಲಿ ಉತ್ತರಿಸುವಂತೆ ಹೇಳಿ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಅಧಿಕವಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಿಯಮಗಳನ್ನು ನಿರ್ಲಕ್ಷ್ಯಸಿ ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಪ್ರಸಾದ್ ಎಂಬುವರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರಾದ ಶ್ರೀಧರ್ ಪ್ರಭು, ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು. ಕೋವಿಡ್ ತುರ್ತು ಪರಿಸ್ಥಿತಿ ವೇಳೆ ಪಾದಯಾತ್ರೆ ಕೈಗೊಂಡಿರುವ ಕ್ರಮ ಸರಿಯಾದುದಲ್ಲ ಎಂದು ವಿವರಿಸಿದರು.
ಈ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಾದ ಮಂಡಿಸಿ, ಸರ್ಕಾರ ಪಾದಯಾತ್ರೆ ನಡೆಸುತ್ತಿರುವ ಮುಖಂಡರ ವಿರುದ್ಧ ನಿಯಮ ಉಲ್ಲಂಘನೆಗಾಗಿ ಎಫ್ಐಆರ್ ದಾಖಲಿಸಿದೆ ಎಂದು ತಿಳಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಪೀಠ, ಕೋವಿಡ್ ಹೆಚ್ಚುತ್ತಿರುವ ಈ ವೇಳೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಅನುಮತಿ ಕೊಟ್ಟಿದ್ದೀರಿ?, ಒಂದು ವೇಳೆ, ಅನುಮತಿ ಕೊಟ್ಟಿಲ್ಲವಾದರೆ ಕ್ರಮ ಜರುಗಿಸಲು ಕಾಯುತ್ತಿರುವುದೇಕೆ?,ಕೋರ್ಟ್ ಆದೇಶದವರೆಗೆ ನೀವು ಕ್ರಮ ಕೈಗೊಳ್ಳುವುದಿಲ್ಲವೇ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದೆ.

About Author

Leave a Reply

Your email address will not be published. Required fields are marked *