ಕಲಾಮಂದಿರಕ್ಕೆ ಗುಂಡೂರಾವ್ ಹೆಸರು : ಅಭಿಮಾನಿಗಳಿಂದ ಮನವಿ

1 min read


ಮೈಸೂರು,ಸೆ.15-ಕರ್ನಾಟಕ ಕಲಾಮಂದಿರಕ್ಕೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಕಲಾಮಂದಿರ ಎಂದು ಹೆಸರು ನಾಮಕರಣ ಮಾಡಬೇಕೆಂದು ಗುಂಡೂರಾವ್ ಅಭಿಮಾನಿ ಬಳಗದ ವತಿಯಿಂದ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹನೂರು ಚನ್ನಪ್ಪ ರವರಿಗೆ ಮನವಿ ಸಲ್ಲಿಸಲಾಯಿತು.
ಇಂದು ಕಲಾಮಂದಿರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಚನ್ನಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಕಲಾಮಂದಿರಕ್ಕೆ ಗುಂಡೂರಾವ್ ಅವರ ಹೆಸರಿಡುವುದರ‌‌ ಜೊತೆಗೆ ಕಲಾಮಂದಿರದ ಆವರಣದಲ್ಲಿ ಅವರ ಪ್ರತಿಮೆ ನಿರ್ಮಾಣ ಮತ್ತು ಭಾವಚಿತ್ರ ಅಳವಡಿಕೆ ಆಗಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ‌ ಕಾಂಗ್ರೆಸ್ ಯುವ ಮುಖಂಡರಾದ ಎನ್.ಎಂ. ನವೀನ್ ಕುಮಾರ್, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದೊಡ್ಡಮಟ್ಟದಲ್ಲಿ ಮೈಸೂರಲ್ಲಿ ಆಯೋಜಿಸಲು ಮುಂದಾದಾಗ ಅದರ ಪರಿಕಲ್ಪನೆಗೆ ಪುಷ್ಠಿಕೊಟ್ಟು ಸರ್ಕಾರದ ವತಿಯಿಂದ ನಿರ್ಮಿಸಿದ ಸಭಾಂಗಣವೇ ಕರ್ನಾಟಕ ಕಲಾಮಂದಿರ ಅಂದು ಮುಖ್ಯಮಂತ್ರಿಯಾಗಿದ್ದ ದಿ. ಆರ್ ಗುಂಡುರಾಯರು ಅದಕ್ಕೆ ಅಡಿಗಲ್ಲು ಹಾಕಿದರು ಬಹಳ ಶ್ರಮಪಟ್ಟು ಕಾರ್ಯಗತಕ್ಕೆ ತಂದರು, ಹಾಗಾಗಿ ಕರ್ನಾಟಕ ಕಲಾಮಂದಿರದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಆರ್ ಗುಂಡೂರಾವ್ ರವರ ಪ್ರತಿಮೆ ಸ್ಥಾಪಿಸಲು ಮೈಸೂರು ಜಿಲ್ಲಾಡಳಿತ ಕನ್ನಡ ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದರು.
ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್ ಮಾತನಾಡಿ, ಈಗಾಗಲೇ ಹಲವು ವರ್ಷದಿಂದ ಮನವಿ ಮಾಡುತ್ತಾ ಬಂದಿದ್ದೇವೆ. ಯಾವ ಅಧಿಕಾರಿಗಳು ಬಂದರೂ ನಿರ್ಲಕ್ಷಿಸುತ್ತಿರುವುದು ಬಹಳ ಬೇಸರದ ಸಂಗತಿ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ನಮ್ಮ ಬೇಡಿಕೆಯನ್ನು ಈ ಕೂಡಲೇ ನೆರವೇರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜೇಶ್ , ಹರೀಶ್ ನಾಯ್ಡು , ಚಕ್ರಪಾಣಿ , ಪೈಲ್ವಾನ್ ಸುನೀಲ್ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *