ಬದುಕಿರುವ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಬಿಜೆಪಿ ಸರ್ಕಾರಕ್ಕೆ ಕಣ್ಣಿಲ್ಲ ಎಂಬುದು ಮತ್ತೆ ಸಾಬೀತು: ಡಿ.ಕೆ. ಶಿವಕುಮಾರ್ ಟೀಕೆ.

1 min read

ಬೆಂಗಳೂರು: ‘ಬದುಕಿರುವ ಯೋಧನ ಮನೆಗೆ ಹೋಗಿ ಕೇಂದ್ರ ಸಚಿವರು ಸಾಂತ್ವನ ಹೇಳಿರುವುದು ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟೀಕಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು ‘ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರಿಗೆ ಅಧಿಕಾರ ಸಿಕ್ಕಿದೆ, ಆ ಬಗ್ಗೆ ನಮ್ಮ ತಕರಾರಿಲ್ಲ. ಅವರು ಬದುಕಿರುವ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿರುವ ಸುದ್ದಿ ನೋಡಿದೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಾರ್ಯಕರ್ತರು ಏನು ಮಾಡುತ್ತಿದ್ದರು? ಅವರು ಯಾವ ಮಾಹಿತಿ ಕೊಟ್ಟರು? ಕೇಂದ್ರ ಸಚಿವರು ಏಕಾಏಕಿ ಪ್ರವಾಸ ಮಾಡುವುದಿಲ್ಲ.’

‘ಸರ್ಕಾರ ಸಂಪೂರ್ಣವಾಗಿ ಕುರುಡಾಗಿದೆ. ಒಬ್ಬ ಕೇಂದ್ರ ಸಚಿವರು ರಾಜ್ಯಕ್ಕೆ ಭೇಟಿ ನೀಡಿದರೆ ಅವರು ಅತಿಥಿ ಇದ್ದಂತೆ. ಅವರು ಎಲ್ಲೇ ಹೋದರೂ, ಅವರ ಜೊತೆ ಪೊಲೀಸರು, ಅಧಿಕಾರಿಗಳು ಇರುತ್ತಾರೆ. ಆದರೂ ಈ ರೀತಿ ಯಡವಟ್ಟು ಆಗಿರುವುದು ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.’

ದೊಡ್ಡ ನಾಯಕರೆಂದು ಬಿಂಬಿಸಿಕೊಳ್ಳಲು ಕೆಲವರು ಮಾತನಾಡುತ್ತಾರೆ:

‘ರಾಜಕಾರಣ ಏನೇ ಇರಲಿ, ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದವರು. ಅವರ ಬಗ್ಗೆ ನಾವು ಎಂದಿಗೂ ಕೇವಲವಾಗಿ ಮಾತನಾಡಿಲ್ಲ.’

‘ಬೆಂಗಳೂರಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಚರಿತ್ರೆಯನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ನೆಹರೂ ಹಾಗೂ ವಾಜಪೇಯಿ ಅವರ ವಿಚಾರವಾಗಿ ನಿತಿನ್ ಗಡ್ಕರಿ ಅವರ ಹೇಳಿಕೆಯನ್ನು ಯಾರೂ ಅಲ್ಲಗಳೆದಿಲ್ಲ. ಕೆಲವರು ತಾನು ದೊಡ್ಡ ನಾಯಕ ಎಂದು ಪ್ರಚಾರ ಪಡೆಯಲು ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ.’

ಕೇಂದ್ರದ ಜವಾಬ್ದಾರಿ:

‘ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರುವುದು ಭಾರತ ಸರ್ಕಾರದ ಜವಾಬ್ದಾರಿ.’

About Author

Leave a Reply

Your email address will not be published. Required fields are marked *