September 8, 2024

ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂ ಮಾಡಿ: ಮಾಜಿ ಸಿಎಂ ಎಸ್.ಎಂ.ಕೃಷ್ಣ

1 min read

ಮೈಸೂರು,ಅ.7-ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂ ಗೋಸ್ಕರ ಸಿದ್ಧ ಮಾಡಬೇಕು ಎಂದು ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಮಾಜಿ ಮುಖ್ಯಮಂತ್ರಿ ಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು,ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂ ಗೋಸ್ಕರ ಸಿದ್ಧ ಮಾಡಬೇಕು. ಮುಂದಿನ ವರ್ಷಕ್ಕೆ ಒಂದು ಪ್ಯಾಕೇಜ್ ಟೂರ್ಸ್ ಮಾಡುವ ಮೂಲಕ ರೂಪುರೇಷೆಗಳು ಹೇಗಿರಬೇಕೆಂಬುದನ್ನು ಸಿದ್ಧಗೊಳಿಸಿ ನಿರ್ಮಿಸಿದರೆ ಬಹುಶಃ  ದಸರಾದಿಂದ ರಾಜ್ಯದ ಅಭಿವೃದ್ಧಿ ಕೂಡ ಸಾಧ್ಯವಿದೆ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.
ಚಾಮುಂಡೇಶ್ವರಿಗೆ ಕೊರೊನಾ ಪಿಡುಗಿನಿಂದ ಮನುಕುಲವನ್ನು ರಕ್ಷಣೆ ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಈ ವರ್ಷದ ದಸರಾವನ್ನು ಸರಳವಾಗಿ ಕೊರೊನಾ ಸೋಂಕು ಬಾರದಂತೆ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿಕೊಂಡು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಿಸಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಅದಕ್ಕಾಗಿ ತಾಯಿ ಚಾಮುಂಡೇಶ್ವರಿಗೆ ನಮಸ್ಕರಿಸುತ್ತೇನೆ ಹಾಗೂ ಸಿಎಂ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಪ್ರಧಾನಿ ಮೋದಿ ದೇಶದ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿದ್ದಾರೆ. ಅವರು ದೇಶವನ್ನು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಶ್ರಮವಹಿಸುವ ವ್ಯಕ್ತಿಯನ್ನು ನಾನು ನೋಡಿಲ್ಲ. ದೇಶವನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಶ್ರಮವಹಿಸುತ್ತಿದ್ದಾರೆ. ಅವರಿಗೆ ಚಾಮುಂಡೇಶ್ವರಿ ದೇವಿ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.
ವಿಜಯನಗರದ ಅರಸರ ಕಾಲದಲ್ಲಿ ಶಕ್ತಿ ಪ್ರದರ್ಶನಕ್ಕಾಗಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ದಸರಾ ಹಬ್ಬ ಕಾಲಕಾಲಕ್ಕೆ ಪರಿವರ್ತನೆಗೆ ಕಾರಣವಾಗಿದೆ. ಈ ಪರಿವರ್ತನೆಗೆ ದಿವಾನರು ಕಾರಣವಾಗಿದ್ದಾರೆ. ಮಹಾರಾಜರು ಮತ್ತು ಮಹಾರಾಣಿಯವರು ಜನರ ಬಗ್ಗೆ ಕಾಳಜಿ ಹೊಂದಿದ್ದರು. ಇದಕ್ಕೆ ಚೆಲುವಾಂಬ ಆಸ್ಪತ್ರೆಯೇ ಸಾಕ್ಷ್ಯ ಎಂದು ಎಸ್​ಎಂಕೆ ಅಭಿಪ್ರಾಯಪಟ್ಟರು.
ಭಾರತ ಈಗ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತ ಚೀನಾದ ನಡುವೆ ಪೈಪೋಟಿಯಿದೆ. ಮತ್ಸರವಿಲ್ಲದ ಸ್ಪರ್ಧೆ ಸ್ವಾಗತರ್ಹ ಎಂದು ಅವರು ಹೇಳಿದರು.

About Author

Leave a Reply

Your email address will not be published. Required fields are marked *