‘ಮೋದಿ ಯುಗ್ ಉತ್ಸವ್’ ಕಾರ್ಯಕ್ರಮ‌ ಆಯೋಜಿಸಿದ್ದ ಶಾಸಕ ರಾಮದಾಸ್ ಗೆ ಸಿಎಂ ಬೊಮ್ಮಾಯಿ ಅಭಿನಂದನೆ

1 min read

ಮೈಸೂರು,ಅ.6-ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆ ಅಂಗವಾಗಿ ‘ಮೋದಿ ಯುಗ್ ಉತ್ಸವ್’ ಕಾರ್ಯಕ್ರಮವನ್ನು 20 ದಿನ ಆಯೋಜಿಸಿದ್ದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ತಿಳಿಸಿದ್ದಾರೆ.
ಮೋದಿ ಜನ್ಮದಿನ ಹಾಗೂ ಪ್ರಧಾನಿಯಾಗಿ ಎರಡು ದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ ‘ಮೋದಿ ಯುಗ್ ಉತ್ಸವ್’ ಕಾರ್ಯಕ್ರಮವನ್ನು 20 ದಿನ ಅತ್ಯಂತ ಅರ್ಥಪೂರ್ಣವಾಗಿ ರಾಮದಾಸ್ ಅವರು ಹಮ್ಮಿಕೊಂಡಿದ್ದು ಸ್ತುತ್ಯರ್ಹ‌ ಎಂದಿದ್ದಾರೆ.


ಈ ಬಗ್ಗೆ ರಾಮದಾಸ್ ಅವರಿಗೆ ಪತ್ರ ಬರೆದಿದ್ದು, ಸೆ. 17 ರಿಂದ ಇಂದಿನವರೆಗೆ 20 ದಿನಗಳ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಜನಕಲ್ಯಾಣ ಯೋಜನೆಗಳನ್ನು 71 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ತಲುಪಿಸಿದ ಶ್ರೇಯ ಇವರದ್ದಾಗಿದೆ. ತಾಯಿ, ಮಗುವಿನ ಆರೋಗ್ಯ ರಕ್ಷಣೆಯ ಮಾತೃವಂದನ, ಗೋವುಗಳ ಆರೋಗ್ಯ ತಪಾಸಣೆ, ಪೋಷಣೆ
ಅಭಿಯಾನ, ಲಸಿಕೆ ಕಾರ್ಯಕ್ರಮಗಳು, ವಿವಿಧ ನಿಗಮ ಮಂಡಳಿಗಳ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿದ ಸಾರ್ಥಕ ಕೆಲಸವನ್ನು ಅವರ ನೇತೃತ್ವದಲ್ಲಿ ನಿರ್ವಹಿಸಲಾಗಿದೆ. ಜೊತೆಗೆ ಅಪರಾಧ ರಹಿತ ಪೊಲೀಸ್ ಠಾಣೆ, ಸ್ವಚ್ಛತೆಯ ಕಾರ್ಯಕ್ರಮ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗೆ ಮೋದಿ ಯುಗ್ ಉತ್ಸವ್ ಸಾಕ್ಷಿಯಾಗಿದೆ ಎಂದಿದ್ದಾರೆ.
ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ಒಯ್ಯಲು ಶ್ರಮಿಸುತ್ತಿರುವ, ಅದೇ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂತೃಪ್ತ ಬದುಕು ನೀಡುವ ಕನಸನ್ನು ಸಾಕಾರಗೊಳಿಸುತ್ತಿರುವ ಪ್ರಧಾನಮಂತ್ರಿ ಮೋದಿ‌ ಅವರ ಜನ್ಮದಿನಕ್ಕೆ ಗೌರವ ಸಲ್ಲಿಸಲು ಇಂತಹ ಸೇವಾ ಚಟುವಟಿಕೆಗಳಿಗಿಂತ ಉತ್ತಮ ಮಾರ್ಗವಿಲ್ಲ ಎಂದು ಭಾವಿಸಿದ್ದೇನೆ.
ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತ್ವರಿತವಾಗಿ ತಲುಪಿಸಲು ಇಂತಹ ಅಭಿಯಾನಗಳು ಸಹಕಾರಿ. 20 ದಿನಗಳ ಅವಧಿಯಲ್ಲಿ ಜನ ಜಾಗೃತಿ ಹಾಗೂ ಜನ ಕಲ್ಯಾಣದ ಕಾರ್ಯವನ್ನು ನಿಸ್ಪೃಹತೆಯಿಂದ
ನಿರ್ವಹಿಸಿದ ಶಾಸಕ ರಾಮದಾಸ್ ಹಾಗೂ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರು, ನಾಗರಿಕರಿಗೂ ಬೊಮ್ಮಾಯಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

About Author

Leave a Reply

Your email address will not be published. Required fields are marked *