ವೀಕೆಂಡ್- ನೈಟ್ ಕರ್ಫ್ಯೂ ಗೆ ಹೋಟೆಲ್ ಮೈಸೂರು ಮಾಲೀಕರ ಸಂಘ ತೀವ್ರ ಖಂಡನೆ!
1 min read![](https://nannurumysuru.com/wp-content/uploads/2021/08/IMG_20210806_204833-1024x683-1.jpg)
ಮೈಸೂರು : ಸರಕಾರ ವಾರಾಂತ್ಯ ಕರ್ಫ್ಯೂ ಘೋಷಣೆ ಮಾಡಿರುವುದನ್ನು ಮೈಸೂರು ಹೋಟೆಲ್ ಮಾಲೀಕರ ಸಂಘ ತೀವ್ರವಾಗಿ ಖಂಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ರಾಜ್ಯದಲ್ಲಿ 13 ಲಕ್ಷ ಮಂದಿ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ. ಹೋಟೆಲ್ನಲ್ಲಿ 80,000 ಮಾಲೀಕರಿದ್ದಾರೆ. ಮೈಸೂರಿನಲ್ಲಿ 25,000 ನೌಕರರು ಹಾಗೂ ಒಂದೂವರೆ ಸಾವಿರ ಮಾಲೀಕರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸವಿಲ್ಲದವರಿಗೆ ಉದ್ಯೋಗದ ಜೊತೆಗೆ ಊಟ, ಉಳಿದುಕೊಳ್ಳಲು ವಸತಿ ವ್ಯವಸ್ಥೆಯನ್ನು ನೀಡುವುದು ಹೋಟೆಲ್ ಆತಿಥ್ಯದ ಉದ್ಯಮವೊಂದೆ ಆಗಿದೆ. ಈ ಆತಿಥೋದ್ಯಮ ವ್ಯಾಪ್ತಿಗೆ ಹೋಟೆಲ್ಗಳು, ಬೇಕರಿ, ಸ್ವೀಟ್ಸ್, ಲಾಡ್ಜ್ , ರೆಸ್ಟೊರೆಂಟ್, ಫಾಸ್ಟ್ ಫುಡ್, ವೆಜ್, ನಾನ್ವೆಜ್ ರೆಸ್ಟೋರೆಂಟ್ಗಳು ಬರುತ್ತವೆ. ಇದರಿಂದ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಮಂದಿ ಸಣ್ಣ ಪುಟ್ಟ ಹೋಟೆಲ್ ವ್ಯಾಪಾರ ಆರಂಭಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ವಾರಾಂತ್ಯ ಲಾಕ್ಡೌನ್ನಿಂದ ಇಲ್ಲಿ ದುಡಿಯುವ ಲಕ್ಷಾಂತರ ಮಂದಿ ಹೆಚ್ಚಾಗಿರುವ ಅಸಂಘಟಿತ ಕಾರ್ಮಿಕರು ಕೆಲಸ ಕಳೆದುಕೊಂಡು ಅತಂತ್ರವಾಗಲಿದ್ದಾರೆ.
ಹೀಗಾಗಿ ಲಾಕ್ಡೌನ್ ಘೋಷಣೆ ಮಾಡದೇ ಕೊರೊನಾ ನಿರ್ವಹಣೆ ಮಾಡುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸರಕಾರ ವಾರಾಂತ್ಯದ ಎರಡು ದಿನ ಕರ್ಫ್ಯೂ ಘೋಷಣೆ ಮಾಡಿರುವುದರಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುವುದಲ್ಲದೇ ಪಟ್ಟಣ ಪ್ರದೇಶದಲ್ಲಿ ಉಳಿದಿರುವ ಸಾವಿರಾರು ಜನರಿಗೆ ಕೋವಿಡ್ ಸಂದರ್ಭದಲ್ಲಿ ಆಹಾರ ಸಮಸ್ಯೆಯಾಗಿತ್ತು.
![](https://nannurumysuru.com/wp-content/uploads/2023/09/Nayana-Kumars.jpg)
ಮಾತ್ರವಲ್ಲದೆ ನಗರ ಪ್ರದೇಶದಲ್ಲಿರುವ ಗ್ರಾಮೀಣ ಜನತೆ ಕೆಲಸವಿಲ್ಲದೆ ಗ್ರಾಮಗಳಿಗೆ ತೆರಳಬೇಕಾಗುತ್ತದೆ. ಕೆಲಸ ಕಳೆದುಕೊಂಡ ಇವರು ಮತ್ತೆ ಆರ್ಥಿಕ ಅಸ್ಥಿರತೆ ಎದುರಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಒಂದೂಕಾಲು ಕೋಟಿ ಜನಸಂಖ್ಯೆ ಇದೆ ಆದರೆ ಮೈಸೂರುನಲ್ಲಿ ಕೇವಲ 12 ಲಕ್ಷ ಜನ ಇರುವುದು. ನಮ್ಮ ಉದ್ಯಮ ಈಗಾಗಲೇ ಪೂರ್ತಿ ನೆಲಕಚ್ಚಿದೆ.ಮತ್ತೆ ಸರ್ಕಾರದಿಂದ ಪಾತಾಳ ಮುಟ್ಟುವ ಕೆಲಸಮಾಡಲಾಗುತ್ತಿದೆ. ಮೈಸೂರಿನ ಸಾರ್ವಜನಿಕರು ರೊಚ್ಚಿಗೇಳುವ ಸನ್ನಿವೇಷ ಸೃಷ್ಟಿಯಾಗುತ್ತಿದೆ. ನಮ್ಮ ಪ್ರಕಾರ ಲಾಕ್ ಡೌನ್ ಪರಿಹಾರವೇ ಅಲ್ಲ . ಜನರನ್ನ ಸರಕಾರವೇ ಸಾಯುವಂತೆ ಮಾಡುತ್ತಿದೆ ಆತ್ಮಹತ್ಯೆ ಮಾಡಿಕೊಳ್ಳುವ ಬೀಧಿಗೆ ಬೀಳುವ ಜನ ಹೆಚ್ಚಾಗುತ್ತಿದ್ದಾರೆ, ಸರಕಾರ ಪದೇ ಪದೆ ಲಾಕ್ಡೌನ್ ಘೋಷಣೆ ಮಾಡುವ ಮೂಲಕ ಜನರನ್ನು ಅತಂತ್ರರನ್ನಾಗಿ ಮಾಡಿಸುವ ಬದಲಿಗೆ ಪರ್ಯಾಯ ಕ್ರಮಗಳ ಜಾರಿಗೆ ಚಿಂತನೆ ನಡೆಸಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.