ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿ CRPF ಯೋಧ ಸಾವು
1 min read![](https://nannurumysuru.com/wp-content/uploads/2021/06/Hunsur-Accident-.jpg)
ಹುಣಸೂರು: ಕಾರೊಂದು ಮದ್ಯರಾತ್ರಿಯಲ್ಲಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಸಿ.ಆರ್.ಪಿ.ಎಫ್ ಯೋಧನೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಮೈಸೂರು-ಬಂಟ್ವಾಳ ಹೆದ್ದಾರಿಯ ಹುಣಸೂರು ತಾಲೂಕಿನ ಅರಸುಕಲ್ಲಹಳ್ಳಿ ಬಳಿಯಲ್ಲಿ ಶುಕ್ರವಾರ ಮದ್ಯರಾತ್ರಿ ನಡೆದಿದೆ.
ಮೂಲತ: ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿಯ ನಾಗರಾಜಶೆಟ್ಟರ ಪುತ್ರ ಅಣ್ಣಯ್ಯ ಶೆಟ್ಟಿ (೩೫) ಮೃತ ಸಿ.ಆರ್.ಪಿ.ಎಫ್.ಯೋಧ, ಪತ್ನಿ, ಇಬ್ಬರು ಮಕ್ಕಳಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
ಪ್ರಸ್ತುತ ಮಹರಾಷ್ಟ್ರದ ನಕ್ಸಲ್ ಏರಿಯಾದ ಗಡ್ಸರ್ನಲ್ಲಿ ೧೪ವರ್ಷಗಳಿಂದ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಎರಡು ದಿನಗಳ ಹಿಂದಷ್ಟೆ ರಜೆ ಮೇಲೆ ಊರಿಗೆ ಬಂದಿದ್ದರು. ಗುರುವಾರ ಮೈಸೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ರಾತ್ರಿ ಊರಿಗೆ ತೆರಳುತ್ತಿದ್ದ ವೇಳೆ ತಾಲೂಕಿನ ಕಲ್ಲಹಳ್ಳಿ ಗೇಟ್ನ ಹತ್ತಿರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟರು. ಶುಕ್ರವಾರ ಮುಂಜಾನೆ ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಕಾರಿನಿಂದ ಶವವನ್ನು ಹೊರ ತೆಗೆದರು.
![](https://nannurumysuru.com/wp-content/uploads/2021/06/image-3.jpg)
ನೋವು-ಆಕ್ರಂದನ; ಹುಣಸೂರಿನ ಶವಗಾರದಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಕುಟುಂಬದವರ ಗೋಳು ಹೇಳತೀರದಾಗಿತ್ತು. ಶುಕ್ರವಾರದಂದೇ ಸ್ವಗ್ರಾಮ ಗೊರಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಇಡೀ ಗ್ರಾಮಸ್ಥರು ಕಂಬನಿ ಮಿಡಿದರು. ಇವರ ಅನೇಕ ಸಹೋದ್ಯೋಗಿಗಳು ಅಂತ್ಯಕ್ರಿಯೆಯಲ್ಲಿ ಬಾಗವಹಿಸಿದ್ದರು.