ತಂಬಾಕು ಬೆಳೆಯ ದಂಡ ಶೇ.5ಕ್ಕೆ ಇಳಿಕೆ, ಪ್ರತಿ ಕೆಜಿಗೆ 1 ರೂ. ಶುಲ್ಕ: ಸಂಸದ ಪ್ರತಾಪ್ ಸಿಂಹ

1 min read

ಮೈಸೂರು,ಜ.18-ಅನಧಿಕೃತ ಬೆಳಗಾರರು ಬೆಳೆದಿರುವ ತಂಬಾಕಿಗೆ ಶೇ.10 ರಷ್ಟು ದಂಡವನ್ನು ಶೇ.5ಕ್ಕೆ ಇಳಿಕೆ ಮಾಡಿ, ಪ್ರತಿ ಕೆಜಿಗಿದ್ದ 2 ರೂ. ಶುಲ್ಕವನ್ನು 1 ರೂ. ಗೆ ಇಳಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.


ಈ ಬಗ್ಗೆ ತಂಬಾಕು ಮಂಡಳಿಯಿಂದ ಆದೇಶವನ್ನು ಸಹ ಹೊರಡಿಸಲಾಗಿದೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ವಾಣಿಜ್ಯ ಸಚಿವಾಲಯ ಹಾಗೂ ತಂಬಾಕು ಮಂಡಳಿಯ ಅಧ್ಯಕ್ಷರು, ಕಾರ್ಯನಿರ್ವಾಹಕ ನಿರ್ದೇಶಕರಿಗೆ ತಂಬಾಕು ಬೆಳೆಗಾರರ ಪರವಾಗಿ ಪ್ರತಾಪ್ ಸಿಂಹ ಅವರು ಧನ್ಯವಾದ ತಿಳಿಸಿದ್ದಾರೆ.


ತಂಬಾಕು ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ತಮ್ಮ ಜೀವನೋಪಾಯಕ್ಕೆ ತಂಬಾಕು ಬೆಳೆಯನ್ನೇ ಅವಲಂಬಿಸಿದ್ದಾರೆ. ತಂಬಾಕು ಮಂಡಳಿಯಲ್ಲಿ ಅಧಿಕೃತ ಬೆಳೆಗಾರರು ಬೆಳೆದಿರುವ ಹೆಚ್ಚಿನ ತಂಬಾಕಿಗೆ ಹಾಗೂ ಅನಧಿಕೃತ ಬೆಳೆಗಾರರು ಬೆಳೆದಿರುವ ತಂಬಾಕಿಗೆ ಶೇ.10 ರಷ್ಟು ದಂಡವನ್ನು ಮತ್ತು ಪ್ರತಿ ಕೆ.ಜಿ ಗೆ 2 ರೂ. ಶುಲ್ಕವನ್ನು ವಿಧಿಸುತ್ತಿದ್ದರು. ಈ ಬಗ್ಗೆ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಶ್ರೀ ಬಿ.ವಿ.ಆರ್.ಸುಬ್ರಮಣ್ಯಂ ಅವರನ್ನು ಭೇಟಿಯಾಗಿ ಈಗ ವಿಧಿಸುತ್ತಿರುವ ದಂಡವನ್ನು ಶೇ.10 ರಿಂದ ಶೇ.5ಕ್ಕೆ ಹಾಗೂ ಪ್ರತಿ ಕೆಜಿಗೆ 2 ರೂ. ಶುಲ್ಕವನ್ನು 1 ರೂ.ಗೆ ಇಳಿಸಬೇಕೆಂದು ಹಲವು ಭಾರಿ ಮನವಿ ಮಾಡಿದ್ದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಅಧಿಕೃತ ಬೆಳೆಗಾರರು ಬೆಳೆದಿರುವ ತಂಬಾಕಿಗೆ ಶೇ.5 ರಷ್ಟು ದಂಡವನ್ನು ಮತ್ತು ಪ್ರತಿ ಕೆ.ಜಿ ಗೆ 1ರೂ. ಶುಲ್ಕವನ್ನು ನಿಗದಿಪಡಿಸಿದ್ದರು.
ಅದೇ ರೀತಿ ಡಿಸೆಂಬರ್ ಅಂತ್ಯದೊಳಗೆ ಅನಧಿಕೃತ ಬೆಳೆಗಾರರು ಬೆಳೆದಿರುವ ತಂಬಾಕಿಗೆ ಶೇ.5 ರಷ್ಟು ದಂಡವನ್ನು ಮತ್ತು ಪ್ರತಿ ಕೆಜಿಗೆ 1ರೂ. ಶುಲ್ಕವನ್ನು ನಿಗದಿಪಡಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆಂದು ತಿಳಿಸಿದ್ದರು. ಅದೇ ರೀತಿ ಈಗ ಅನಧಿಕೃತ ಬೆಳೆಗಾರರು ಬೆಳೆದಿರುವ ತಂಬಾಕಿಗೂ ಸಹ ಶೇ.5 ರಷ್ಟು ದಂಡವನ್ನು ಮತ್ತು ಪ್ರತಿ ಕೆಜಿಗೆ 1ರೂ. ಶುಲ್ಕವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದ್ದಾರೆ.
ಆದೇಶದ ಪ್ರಕಾರ 2021-22 ನೇ ಸಾಲಿಗೆ ಎಲ್ಲಾ ಅಧಿಕೃತ ಬೆಳೆಗಾರರ ಹೆಚ್ಚುವರಿ ಕೆಜಿ ಗೆ ದಂಡದ ಪ್ರಮಾಣವನ್ನು ಪ್ರತಿ ಕೆಜಿ ಗೆ ರೂ.1, ನೂರು ರೂಪಾಯಿಗೆ ರೂ.5 ರಂತೆ ಮತ್ತು ಎಲ್ಲಾ ಅನಧಿಕೃತ ತಂಬಾಕು ಬೆಳೆಗಾರರಿಗೆ (ಕಾರ್ಡ್) ದಂಡದ ಪ್ರಮಾಣವನ್ನು ಪ್ರತಿ ಕೆಜಿಗೆ ರೂ.1 ಮತ್ತು ನೂರು ರೂಪಾಯಿಗೆ ರೂ.5 ರಂತೆ ಮಾರ್ಪಡಿಸಿ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಸುಮಾರು 26 ಸಾವಿರ ಬ್ಯಾರನ್ ಹೊಂದಿರುವ 11 ಸಾವಿರ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಹೀಗಾಗಿ ತಂಬಾಕು ಬೆಳೆಗಾರರು ತಮ್ಮ ಬಳಿಯಿರುವ ತಂಬಾಕನ್ನು ಮಾರಾಟ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರತಾಪ್ ಸಿಂಹ ಅವರು ಮನವಿ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *