ತಂಬಾಕಿಗೆ ದಂಡ ಕಡಿಮೆ ಮಾಡುವಂತೆ ಸಂಸದ ಪ್ರತಾಪ್ ಸಿಂಹರಿಂದ ಕೇಂದ್ರ ಸಚಿವರಲ್ಲಿ ಮನವಿ
1 min readಮೈಸೂರು/ನವದೆಹಲಿ,ಅ.22-ತಂಬಾಕಿಗೆ ದಂಡ ಕಡಿಮೆ ಮಾಡುವ ಬಗ್ಗೆ ಸಂಸದರಾದ ಪ್ರತಾಪ್ ಸಿಂಹ ಅವರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ತಂಬಾಕು ಮಂಡಳಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.
ಪ್ರತಾಪ್ ಸಿಂಹ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್, ತಂಬಾಕು ಮಂಡಳಿ ಅಧ್ಯಕ್ಷರು ಹಾಗೂ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಬಿ.ವಿ.ಆರ್ ಸುಬ್ರಮಣ್ಯಂ ಅವರನ್ನು ಭೇಟಿಯಾಗಿ ಈಗ ವಿಧಿಸುತ್ತಿರುವ ದಂಡವನ್ನು ಶೇ.10 ರಿಂದ ಶೇ.5ರಷ್ಟಕ್ಕೆ ಹಾಗೂ ಪ್ರತಿ ಕೆ.ಜಿ ಗೆ 2 ರೂ . ಶುಲ್ಕವನ್ನು 1 ರೂ. ಗೆ ಇಳಿಸಬೇಕೆಂದು ಮನವಿ ಮಾಡಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರದಲ್ಲೇ ಇದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೆವೆಂದು ತಿಳಿಸಿದ್ದಾರೆ. ಇದರಿಂದ ಖೋಟಾ ಗಿಂತ ಹೆಚ್ಚಾಗಿ ಬೆಳೆಯುತ್ತಿರುವ ಅಧಿಕೃತ ತಂಬಾಕು ಬೆಳೆಗಾರರಿಗೆ ಮತ್ತು ಅನಧಿಕೃತ ತಂಬಾಕು ಬೆಳೆಗಾರರಿಗೆ ಆಗುತ್ತಿರುವ ಆರ್ಥಿಕ ಹೊರೆಯು ತಗ್ಗಲಿದೆ ಹಾಗೂ ರೈತರ ಕಡೆಗೆ ಒಂದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.
ತಂಬಾಕು ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ತಮ್ಮ ಜೀವನೋಪಾಯಕ್ಕೆ ತಂಬಾಕು ಬೆಳೆಯನ್ನೇ ಅವಲಂಬಿಸಿದ್ದಾರೆ. ತಂಬಾಕು ಮಳೆಯಾಶ್ರಿತ ಬೆಳೆಯಾಗಿದ್ದು, ರೈತರು ಎಲ್ಲಾ ರೀತಿಯ ಹವಾಮಾನ ವೈಪರಿತ್ಯಗಳನ್ನು ಮತ್ತು ಕೂಲಿ ಕಾರ್ಮಿಕರ ಸಮಸ್ಯೆಯನ್ನು ಎದುರಿಸಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಹವಾಮಾನಕ್ಕೆ ಅನುಗುಣವಾಗಿ ಬೆಳೆಯ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ನಿಖರವಾಗಿ ಅಂದಾಜಿಸಲು ಸಾಧ್ಯವಾಗಿವುದಿಲ್ಲ. ಆದರೆ ತಂಬಾಕು ಮಂಡಳಿಯಲ್ಲಿ ಅಧಿಕೃತ ಬೆಳೆಗಾರರು ಬೆಳೆದಿರುವ ಹೆಚ್ಚಿನ ತಂಬಾಕಿಗೆ ಹಾಗೂ ಅನಧಿಕೃತ ಬೆಳೆಗಾರರು ಬೆಳೆದಿರುವ ತಂಬಾಕಿಗೆ ಶೇಕಡಾ 10 % ದಂಡವನ್ನು ಮತ್ತು ಪ್ರತಿ ಕೆ.ಜಿ ಗೆ 2 ರೂ ಶುಲ್ಕವನ್ನು ವಿಧಿಸುತ್ತಿದ್ದಾರೆ. ಹೀಗಾಗಿ ದಂಡವನ್ನು ಇಳಿಸುವಂತೆ ಮನವಿ ಮಾಡಿದರು.