ಸಿದ್ದರಾಮಯ್ಯ ಹೊಟ್ಟೆ ಕಿಚ್ಚು ಪಡುವಷ್ಟು ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ: ಸಚಿವ ಅರಗ ಜ್ಞಾನೇಂದ್ರ
1 min readಮೈಸೂರು,ಸೆ.28-ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೊಟ್ಟೆ ಕಿಚ್ಚು ಪಡುವಷ್ಟು ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಆರ್ ಎಸ್ ಎಸ್ ನವರದ್ದು ತಾಲಿಬಾನಿ ಸಂಸ್ಕೃತಿ ಎಂದು ಟೀಕಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರಂತಹ ಹಿರಿಯರು ಆಡಿದ ಮಾತಿಗೆ ನಾನೇನು ಹೇಳಲು ಹೋಗಲ್ಲ. ಸಿದ್ದರಾಮಯ್ಯನವರು ಹೊಟ್ಟೆಕಿಚ್ಚು ಪಡುವಷ್ಟು ಈ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ತಾಲಿಬಾನಿಗೂ ಆರ್ ಎಸ್ಎಸ್ ಗೂ ಇರುವಂತಹ ವ್ಯತ್ಯಾಸವನ್ನು ಅಂತಹ ಹಿರಿಯರು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಅವರಿಗೂ ಅರ್ಥವಾಗಿದೆ. ವಿರೋಧ ಪಕ್ಷದವರಾಗಿ ಎಲ್ಲೋ ಒಂದು ಕಡೆ ಕೆಣಕಬೇಕು ಜನರ ಎದುರಿಗೆ ಒಂದು ಸಂಘಟನೆಯನ್ನು ಅಪಹಾಸ್ಯ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಎಂದಿರುವ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಯಾರಿಗೆ ಮನುಷ್ಯತ್ವ ಇಲ್ಲ ಯಾರಿಗೆ ಮನುಷ್ಯತ್ವ ಇದೆ ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಸಂಘಟನೆ ಎಲ್ಲಿದೆ ಅಂತ ಬ್ಯಾಟರಿ ಹಾಕಿ ಹುಡುಕಬೇಕಿದೆ ಎಂದು ಟಾಂಗ್ ನೀಡಿದರು.