ಮೈಸೂರಿನ ದೇವು ಹತ್ಯೆ ಪ್ರಕರಣ- ಅವ್ವ ಮಾದೇಶ್, ಸಹೋದರ ಸೇರಿ 18 ಮಂದಿ ಖುಲಾಸೆ!
1 min readಮೈಸೂರು : ಮೈಸೂರಿನ ಪಡುವಾರಹಳ್ಳಿ ದೇವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾದೇಶ್ ಅಲಿಯಾಸ್ ಅವ್ವ ಮಾದೇಶ್ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಪ್ರಕರಣದಲ್ಲಿ 11 ಮಂದಿಗೆ ಶಿಕ್ಷೆಯಾಗಿದ್ದು, 18 ಮಂದಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿಗಳಾದ ರಘುನಾಥ್ ಅವರಿಂದ ಆದೇಶ ಹೊರಡಿಸಿದ್ದು, ಪ್ರಕರಣದಲ್ಲಿ ಒಟ್ಟು 29 ಮಂದಿಯನ್ನ ಆರೋಪಿಗಳನ್ನಾಗಿ ಮಾಡಲಾಗಿತ್ತು. ಈ ವೇಳೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅವ್ವಾ ಮಾದೇಶ್ ಸೇರಿದಂತೆ 18 ಮಂದಿಯನ್ನ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಇನ್ನು ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ ಆಗಲಿದ್ದು 2016ರಲ್ಲಿ ನಡೆದಿದ್ದ ದೇವು ಕೊಲೆ ಪ್ರಕರಣ ಇದಾಗಿದೆ. ಮೈಸೂರಿನಲ್ಲಿ ದಾಖಲಾಗಿದ್ದ ಮೊದಲ ಕೋಕಾ ಕಾಯ್ದೆ ಪ್ರಕರಣ ಇದಾಗಿದ್ದು, ಕೋಕಾ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಜೊತೆಗೆ ಐಪಿಸಿ ಸೆಕ್ಷನ್ 143, 147, 148, 129b, 302, 201, 303, 117, ಸಹವಾಚಕ ಹಾಗೂ 149 ರಂತೆ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೂ ಜೈಲಿನಲ್ಲೇ ಇದ್ದ ಅಪರಾಧಿಗಳು ಹಾಗೂ ಆರೋಪಿತರಿಗೆ ಇಂದು ನ್ಯಾಯಾಲಯ ತೀರ್ಪು ನೀಡಲಾಗಿದೆ. ಮಹದೇಶ್ ಅಲಿಯಾಸ್ ಅವ್ವಾ ಮಾದೇಶ್ ಜೆಡಿಎಸ್ ಪ್ರಮುಖ ಮುಖಂಡರಾಗಿದ್ದು ಪ್ರಕರಣದಲ್ಲಿ 26ನೇ ಆರೋಪಿಯಾಗಿದ್ದಾರೆ. ಇನ್ನು ಇವರ ಸಹೋದರ ಮಂಜು ಕೂಡಾ 22ನೇ ಅರೋಪಿಯಾಗಿದ್ದು, ಇದೀಗಾ ಇಬ್ಬರ ಮೇಲೂ ಒಳಸಂಚು ಆರೋಪದಿಂದ ಜೈಲುವಾಸ ಅನುಭವಿಸಿ ಬಿಡುಗಡೆಯಾಗುತ್ತಿದ್ದಾರೆ. ಸರ್ಕಾರದ ಪರ ವಿಶೇಷ ಅಭಿಯೋಜಕರಾಗಿ ಪಿ.ಪಿ, ಸುದೀಪ್ ಬಂಗೇರ ಅವರು ವಾದ ಮಂಡಿಸಿದರೆ, ಆರೋಪಿಗಳ ಪರ ಪರಮೇಶ್ವರಪ್ಪ ಹಾಗೂ ಸಿ.ನಾಗರಾಜು ವಾದ ಮಂಡನೆ ಮಾಡಿದರು.