ಕೇಕ್ನಲ್ಲಿ ಅರಳಿದ ಅಪ್ಪು ನೆನಪು!
1 min readಪುನೀತ್ ರಾಜಕುಮಾರ್ ನಮ್ಮನ್ನ ಬಿಟ್ಟು ಒಂದು ತಿಂಗಳಾಗಿದೆ. ಆದರು ಅಪ್ಪು ಮಾತ್ರ ಎಲ್ಲರ ಮನದಲ್ಲಿ ಅಮರರಾಗಿದ್ದಾರೆ. ಈಗಲು ಅಪ್ಪು ನೆನಪಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಈ ನಡುವೆ ಮೈಸೂರಿನಲ್ಲಿ ಅಪ್ಪು ನೆನಪಿಸಿಕೊಳ್ಳುವ ಅತಿ ದೊಡ್ಡ ಕೇಕ್ ಉತ್ಸವ ನಡೆಯುತ್ತಿದೆ. ಇಲ್ಲಿನ ಕೇಕ್ ಹಾಗೂ ಪುನೀತ್ ಎರಡು ಪ್ರವಾಸಿಗರ ಕೂಡ ಕಣ್ಮನ ಸೆಳೆಯುತ್ತಿದೆ.
- ಬೊಂಬೆ ಹೇಳುತೈತೆ…… ಬೊಂಬೆ ಹೇಳುತೈತೆ ನೀನೆ ರಾಜಕುಮಾರ. ಎಸ್ ರಾಜಕುಮಾರ್ ಸಿನಿಮಾದ ಈ ಸಾಂಗ್ ಕೇಳಿದರೆ ಕಣ್ಣು ತುಂಬಿ ಬರುತ್ತೆ. ಅಪ್ಪು ನೆನಪಾಗಿ ಎದೆ ಭಾರವಾಗುತ್ತದೆ. ಸಮಾಜಮುಖಿ ಚಿಂತನೆಯ ಅಪರೂಪದ ನಟ ಪುನೀತ್ ರಾಜಕುಮಾರ್ ಅಗಲಿಕೆ ಎಲ್ಲರಿಗೂ ತುಂಬಲಾರದ ನೋವನ್ನು ತಂದಿದೆ. ಪ್ರತಿದಿನ ಅವರ ನೆನಪಿನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಇದೀಗ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಪ್ಪುವಿನ ಕೇಕ್ ಎಲ್ಲರ ಗಮನ ಸೆಳೆಯುತ್ತಿದೆ.
-ಹೌದು, ಇಂದಿನಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಶೋಭೆ ವಸ್ತು ಪ್ರದರ್ಶನ ಆರಂಭವಾಗಿದೆ. ಇಲ್ಲಿ ಅಪ್ಪುವಿನ ಬೃಹದಾಕಾರವಾದ ಕೇಕ್ ತಯಾರಿಸಲಾಗಿದೆ. ಕೇವಲ ಪುನೀತ್ ಮಾತ್ರವಲ್ಲ ವರನಟ ಡಾ. ರಾಜ್ಕುಮಾರ್ ಅವರ ಕೇಕ್ ಸಹಾ ಮಾಡಲಾಗಿದೆ. ಈ ವಿಶೇಷ ಕೇಕ್ ಮೂರ್ತಿಯನ್ನು ತಯಾರಿಸಿ ಇದರ ಜೊತೆಗೆ ಅಪ್ಪು ಅಭಿನಯದ ಸಿನಿಮಾಗಳ ಕೇಕ್ ಹಾಗೂ ಅಣ್ಣಾವ್ರ ನಟಿಸಿದ ಸಾಕಷ್ಟು ಚಿತ್ರಗಳ ಪೋಸ್ಟರ್ ಬಳಸಿಕೊಂಡು ತಯಾರಿಸಿರುವ ಕೇಕ್ ಆಕರ್ಷಕವಾಗಿ ಮೂಡಿ ಬಂದಿದೆ.
–ಪ್ರತಿ ವರ್ಷ ಭಿನ್ನ ವಿಭಿನ್ನ ಕೇಕ್ ಮಾಡುವ ಡಾಲ್ಫಿನ್ ಬೇಕರಿಯವರು ಈ ಬಾರಿ ಅಪ್ಪುಗಾಗಿ ಅಪ್ಪು ನೆನಪಿಗಾಗಿ ಈ ಕೇಕ್ ತಯಾರಿಸಿದ್ದಾರೆ. ಇನ್ನು 15 ದಿನ ಈ ವಸ್ತು ಪ್ರದರ್ಶನ ನಡೆಯಲಿದ್ದು ಅಪ್ಪು ಕೇಕ್ನ್ನು ಎಲ್ಲರೂ ಕಣ್ತುಂಬಿಕೊಳ್ಳಬಹುದಾಗಿದೆ.