30 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ!
1 min readಮೈಸೂರು ಕೇಂದ್ರ ಕಾರಗೃಹದಿಂದ ಬಿಡುಗಡೆಯಾದ ಸನ್ನಡತೆಯ ಖೈದಿಗಳು!
ಸನ್ನಡತೆಯ ಆಧಾರದ ಮೇಲೆ ರಾಜ್ಯಾದ್ಯಂತ 161 ಖೈದಿಗಳನ್ನ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಬಿಡುಗಡೆಗೊಳಿಸಲಾಗಿದೆ. ಅದರಂತೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 30 ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಜೈಲುವಾಸದಿಂದ ಬಿಡುಗಡೆಗೊಳಿಸಲಾಯಿತು. ಮೂವರು ಮಹಿಳೆಯರು ಹಾಗೂ 27 ಪುರುಷರನ್ನ ಬಂಧ ಮುಕ್ತಗೊಳಿಸಿ ಅವರಿಗೆ ಜೈಲಿನ ಅಧೀಕ್ಷಕರು ಹಾಗೂ ನ್ಯಾಯಾಧೀಶರು ಮುಂದಿನ ಜೀವನಕ್ಕೆ ಶುಭಹಾರೈಸಿದರು. ಇದೇವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಅವರು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಫೂರ್ವಭಾವಿಯಾಗಿ ಬಿಡುಗಡೆಗೊಳಿಸಿಲಾಗಿದೆ. ಇದು ಅವರ ಹೊಸ ಜೀವನಕ್ಕೆ ಒಂದು ಅವಕಾಶಕೊಟ್ಟಂತಾಗಿದೆ. ಸಮಾಜದಲ್ಲಿ ಮುಂದೆ ಉತ್ತಮವಾಗಿ ಜೀವನ ಸಾಗಿಸಿ ಎಂದು ತಿಳಿ ಹೇಳಿದ್ದೇವೆ ಎಂದರು.
ಕಾರಾಗೃಹ ಅಧೀಕ್ಷಕಿ ಕೆ.ಸಿ ದಿವ್ಯಶ್ರೀ ಅವರು ಮಾತನಾಡಿ, ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದೇವೆ. ಅವರು ಬದುಕು ಚೆನ್ನಾಗಿರಲಿ ಎಂದು ಬೀಳ್ಕೊಟ್ಟಿದ್ದೇವೆ. ಇವರ ಬಿಡುಗಡೆಯಿಂದ ಮತ್ತಷ್ಟು ಖೈದಿಗಳಿಗೆ ಸ್ಪೂರ್ತಿ ಸಿಗಲಿದೆ. ನಮ್ಮ ಜೈಲಿನಿಂದ ಮತ್ತಷ್ಟು ಜೈಲುವಾಸಿಗಳು ಹೀಗೆ ಸನ್ನಢತೆ ಆಧಾರದಲ್ಲಿ ಹೊರಗೆ ಹೋಗಿ ಹೊಸ ಜೀವನ ನಡೆಸಲಿ ಎಂದು ಆಶಿಸುತ್ತೇನೆ.